ನೈಜ ಕತೆ, ಸಹಜ ನಿರೂಪಣೆ, ಹಲವಾರು ಕಲಾವಿದರುಗಳಿಗೆ ಪಾದಾರ್ಪಣೆ ಆಗುತ್ತಿರುವ ’ದುಷ್ಟ’ ಬಹುಮುಖಿ ಎಸ್. ನಾರಾಯಣ ಅವರ ವೃತ್ತಿ ಬದುಕಿನಲ್ಲಿ ಮೈಲಿಗಲ್ಲಾಗುವ ಎಲ್ಲಾ ಆಶಾಭಾವನೆ ಕಂಡುಬರುತ್ತಿದೆ. ’ದುಷ್ಟ’ ಚಿತ್ರವು ಎಸ್. ನಾರಾಯಣ ಹುಟ್ಟಿದ ನಾಡಿನಿಂದ ಹುಟ್ಟಿದ ಕತೆ. ಅದೇ ನಾಡಿನಲ್ಲಿ ಅವರು ಸಂಪೂರ್ಣ ಚಿತ್ರೀಕರಣವನ್ನು ಕೂಡ ಮಾಡಿರುವರು.
ಈಗಾಗಲೇ ತಿಳಿದಿರುವಂತೆ ೨೦ಕ್ಕೂ ಹೆಚ್ಚು ಹೊಸ ಕಲಾವಿದರು ’ದುಷ್ಟ’ ಚಿತ್ರದಲ್ಲಿ ಪಾದಾರ್ಪಣೆ ಮಾಡಿದ್ದಾರೆ. ಚಿತ್ರದಲ್ಲಿ ಅವರೆಲ್ಲರೂ ಮಾತನಾಡುವುದು ಮಳವಳ್ಳಿ, ಮಂಡ್ಯ ಹಾಗೂ ಚಾಮರಾಜನಗರ ಸುತ್ತಮುತ್ತ ಬಳಸುವ ಕನ್ನಡವನ್ನು. ಹಾಗಾಗಿ ಆ ಪ್ರದೇಶಗಳಿಂದಲೇ ಎಂಟ್ಹತ್ತು ಒಪ್ಪಿಗೆಯಾಗುವ ಕಂಠ ಹೊಂದಿರುವ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಂಡು ನಿರ್ದೇಶಕರು ಮಾತುಗಳನ್ನು ಜೋಡಿಸಿದ್ದಾರೆ.
ಹೊಸ ಕಲಾವಿದರಾದ ಹುಬ್ಬಳ್ಳಿಯ ವೀರೇಶ್, ಉದಯ್, ಅಜಯ್, ಚಂದ್ರಶೇಖರ್, ಮಾಸ್ಟರ್ ಪವನ್, ಪಾರ್ವತಿ ವೆಂಕಟೇಶ್, ಶಶಿಕಲಾ ಹಣಗಲ್, ಲಕ್ಷ್ಮಣ್, ಶಿವರಾಜ್, ಕೆ.ಎಸ್. ರವಿಕುಮಾರ್, ಕೆ. ರವೀಂದ್ರನಾಥ್, ಜಯಶ್ರೀ ಗಣೇಶ್ ಹಾಗೂ ಇನ್ನಿತರರು ಪ್ರಥಮ ಬಾರಿಗೆ ’ದುಷ್ಟ’ ಚಿತ್ರದಲ್ಲಿ ೪೦ಕ್ಕೂ ಹೆಚ್ಚು ದಿವಸ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.
’ದುಷ್ಟ’ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ಸಂಗೀತ, ನಿರ್ದೇಶನ ಹಾಗೂ ನಿರ್ಮಾಣ ಎಸ್. ನಾರಾಯಣ್ ಅವರದು.
ಮುಂದಿನ ತಿಂಗಳ ಮೊದಲ ವಾರದಲ್ಲಿ ’ದುಷ್ಟ’ನ ಅದೃಷ್ಟ ತಿಳಿದು ಬರಲಿದೆ.